Rajesh Naik

ಇಸ್ರೇಲ್ ಮಾದರಿಯ ತಾಂತ್ರಿಕ ಕೃಷಿಗೆ ದ.ಕ. ಮತ್ತು ಉಡುಪಿ ಜಿಲ್ಲೆ ಸೂಕ್ತ

ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಇಸ್ರೇಲ್ ಮಾದರಿಯ ತಾಂತ್ರಿಕ ಮಾದರಿಯಲ್ಲಿ ಕೃಷಿ ಮಾಡಲು ಇಲ್ಲಿನ ಮಣ್ಣು ಸೂಕ್ತವಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಹೇಳಿದರು. ‌

ಅವರು ದ.ಕ.ಜಿಲ್ಲಾ ಪಂಚಾಯತ್ ಮಂಗಳೂರು, ಕೃಷಿ ಇಲಾಖೆ ವತಿಯಿಂದ ವಿವಿಧ ಇಲಾಖೆಗಳ ಒಗ್ಗೂಡುವಿಕೆಯೊಂದಿಗೆ ಬಂಟ್ವಾಳ ತಾಲೂಕು ಪಂಚಾಯತ್ ನ ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ನಡೆದ ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ ಸಮಗ್ರ ಕೃಷಿ ಅಭಿಯಾನ 2019-20 ಕಾರ್ಯಕ್ರಮ ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

TP

ದ.ಕ.ಜಿಲ್ಲೆಯಲ್ಲಿ ಕೃಷಿ ಸಂಸ್ಕೃತಿಯನ್ನು ನಾವು ಮುಂದಿನ ಜನಾಂಗಕ್ಕೆ ಉಳಿಸಿ ತಿಳಿಸಿಕೊಡದಿದ್ದರೆ, ಮಕ್ಕಳಿಗೆ ಕೃಷಿಯ ಬಗ್ಗೆ ಆಸಕ್ತಿ ತೋರಿಸದಿದ್ದರೆ ಬಂಟ್ವಾಳ ತಾಲೂಕಿನ‌ ಪ್ರತಿಯೊಂದು ಮನೆ ವೃದ್ದಾಶ್ರಮವಾಗುವುದರಲ್ಲಿ ಸಂದೇಹವಿಲ್ಲ ಎಂದು ಅವರು ಹೇಳಿದರು. ಕೃಷಿ ಮಾರುಕಟ್ಟೆಯಲ್ಲಿ ನಾವು ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ಮಾಡಬೇಕಾಗಿದೆ ಎಂದರು.

ಕೃಷಿಕರಿಗೆ ಉಪಯೋಗವಾಗದ ಕಾರ್ಯಕ್ರಮದ ಮೂಲಕ ಇಲಾಖೆ ರೈತರನ್ನು ಮೋಸ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದರು. ಕೃಷಿ ಇಲಾಖೆ ರೈತರ ಮನೆ ಬಾಗಿಲಿಗೆ ಎಂಬ ಕಾರ್ಯಕ್ರಮ ಮಾಡಲು ಹೊರಟಿದೆ ಆದರೆ ಕಾರ್ಯಕ್ರಮದ ಆಮಂತ್ರಣ ಪತ್ರದಲ್ಲಿ ಅರ್ಧ ಗಂಟೆಗೊಮ್ಮೆ ಕಾರ್ಯಕ್ರಮ ಗಳ ಟೈಂ ಟೇಬಲ್ ನಮೂದಿ ಮಾಡಿದೆ. ಇದು ಸಾಧ್ಯನಾ ಎಂದು ಪ್ರಶ್ನಿಸಿದರು. ಕೇವಲ ವಾಹನ ಮೂಲಕ ಜಾಥ ಮಾಡುವುದಾ ಅಥವಾ ಕಾರ್ಯಕ್ರಮ ಮಾಡಲಿಕ್ಕೆ ಇದೆಯಾ ಎಂದು ಅವರು ಪ್ರಶ್ನಿಸಿದರು.

ಇಂತಹ ನಾಮಕಾವಸ್ಥೆಯ ಕಾರ್ಯಕ್ರಮ ನೀವು ಮಾಡುವುದೇ ಬೇಡ, ಮತ್ತು ಈ ರೀತಿಯಲ್ಲಿ ರೈತರನ್ನು ಮೋಸಮಾಡುವುದಕ್ಕೆ ನನ್ನ ವಿರೋಧವಿದೆ ಎಂದರು.
ಜೊತೆಗೆ ಈ ತಾಲೂಕಿನಲ್ಲಿ ಭತ್ತ, ಅಡಿಕೆ ಹೀಗೆ ಬೇರೆ ಬೇರೆ ಬೆಲೆಗಳ ನ್ನು ಬೆಳೆಯುವ ಬೆಳೆಗಾರರ ಮಾಹಿತಿ ಬೇಕು ಮತ್ತು ಯಾಕೆ ಇಳುವರಿ ಕಡಿಮೆ ರೈತರು ಯಾಕೆ ಕೃಷಿಯಿಂದ ದೂರ ಅಗುತ್ತಿದ್ದಾರೆ ಎಂಬ ಪೂರ್ಣ ಮಾಹಿತಿ ನಿಮ್ಮಲ್ಲಿ ಇದ್ದರೆ ಅದಕ್ಕೆ ಬೇಕಾದ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ಕೇವಲ ಮೈಕ್ ಬಳಸಿ ವಾಹನದಲ್ಲಿ ಹೋದರೆ ಯಾವ ಪ್ರಯೋಜನವಾಗುವುದಿಲ್ಲ. ಇಲಾಖೆಯ ಪ್ರತಿಯೊಬ್ಬ ಅಧಿಕಾರಿಗೂ ಜವಾಬ್ದಾರಿಯಿದೆ ಎಂದು ಅವರು ಅಧಿಕಾರಿಗಳಿಗೆ ತಿಳಿಸಿದರು.

ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಮಾತನಾಡಿ ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದ ಕಾರಣ ಕೃಷಿಯಿಂದ ದೂರ ಉಳಿಯುತ್ತಿದ್ದಾರೆ. ಸ್ವಂತ ಜಮೀನಿನಲ್ಲಿ ಕೃಷಿ ಬೆಳೆದು ಇದಕ್ಕೆ ಸೂಕ್ತವಾದ ಬೆಲೆ ಸಿಗುವಂತೆ ಮಾಡಲು ಹಾಗೂ ಯಾಂತ್ರೀಕೃತ ಕೃಷಿಗೆ ಪೂರಕವಾದ ಕಾರ್ಯಕ್ರಮ ಸರಕಾರ ಕೈಗೊಂಡಿದೆ, ಇದಕ್ಕೆ ಕೃಷಿಕರು ಕೈ ಜೋಡಿಸಿದಾಗ ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂದರು.

ವೇದಿಕೆಯಲ್ಲಿ ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಮೀ ಸಿ.ಬಂಗೇರ, ಜಿ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಯು.ಪಿ. ಇಬ್ರಾಹಿಂ, ಜಿ.ಪಂ.ಸದಸ್ಯ ರವೀಂದ್ರ ಕಂಬಳಿ, ತುಂಗಪ್ಪ ಬಂಗೇರ, ಬಂಟ್ವಾಳ ಎ.ಪಿ.ಎಂ.ಸಿ.ಅಧ್ಯಕ್ಷ ಪದ್ಮನಾಭ ರೈ, ಬಂಟ್ವಾಳ ಕೃಷಿ ಸಮಾಜದ ಅಧ್ಯಕ್ಷ ಅಶೋಕ್ ಕುಮಾರ್ ಬರಿಮಾರು, ತಾ.ಪಂ.ಸದಸ್ಯ ಪ್ರಭಾಕರ ಪ್ರಭು, ತಾ.ಪಂ.ಮುಖ್ಯಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ ಉಪಸ್ಥಿತರಿದ್ದರು.

ಬಂಟ್ವಾಳ ಹೋಬಳಿ, ಪಾಣೆಮಂಗಳೂರು ಹೋಬಳಿ ಮತ್ತು ವಿಟ್ಲ ಹೋಬಳಿ ಮೂರು ವಿಭಾಗದಲ್ಲಿ ಜೂನ್ 24 ರಿಂದ ಜುಲೈ 3 ರ ವರೆಗೆ ಪ್ರತಿ ಗ್ರಾಮದಲ್ಲಿ ಕೃಷಿ ಅಭಿಯಾನ ಕಾರ್ಯಕ್ರಮ ನಡೆಯಲಿದ್ದು ಈ ಕಾರ್ಯಕ್ರಮದ ಪ್ರಯೋಜನ ಪಡೆಯುವಂತೆ ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕ ನಾರಾಯಣ ಶೆಟ್ಟಿ ಅವರು ತಿಳಿಸಿದರು.

ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕ ನಾರಾಯಣ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಂಟ್ವಾಳ ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ನಂದನ್ ಶೆಣೈ ಸ್ವಾಗತಿಸಿದರು.

Back To Top
Highslide for Wordpress Plugin